ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳು

ನಮ್ಮ ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳು ದಿನನಿತ್ಯ ಮಾಡುವ ಕೆಲಸ ಕಾರ್ಯಗಳು ಅಥವಾ ಆಚಾರ ವಿಚಾರ ನಡೆ ನುಡಿ ಇವುಗಳನ್ನು ಹಿರಿಯರು ಹೇಳುತ್ತಿದ್ದರು. ಕೆಲವೊಂದು ನೋಡಿ ತಿದ್ದಿ ಮಾಡಿಸುತ್ತಿದ್ದರು. ಬೆಳಿಗ್ಗೆ ಬಲ ಮಗ್ಗುಲಲ್ಲಿ ಏಳುವುದರಿಂದ ರಾತ್ರಿ ಮಲಗುವ ತನಕ ನಿತ್ಯ ಜೀವನದ ನಿಯಮಾವಳಿಗಳನ್ನು ಹೇಳುತ್ತಿದ್ದರು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರವು ಹಿರಿಯರು ಹೇಳಿರುವ ಶಾಸ್ತ್ರ ಸಂಪ್ರದಾಯಗಳಿಗೆ ಪ್ರತಿಯೊಂದಕ್ಕೂ ಕಾರಣ ಇರುತ್ತಿತ್ತು.

ಅದನ್ನು ಪಾಲಿಸದೇ ಇದ್ದಾಗ ನಮಗೆ ಕೆಡಕಾಗುತ್ತದೆ. ಇಂಥ ವಿಚಾಗಳನ್ನು ಹೆಣ್ಣು ಮಕ್ಕಳಿಗೆ ಪದೇ ಪದೇ ಹೇಳುತ್ತಿದ್ದರು ಏಕೆಂದರೆ ಅಡುಗೆ ಮನೆಗೆ ಗೃಹಲಕ್ಷ್ಮಿ ಹೆಣ್ಣು ಇಂಥ ಹೆಣ್ಣು ಮನೆಯ ಕಣ್ಣು ಆದ್ದರಿಂದ ಮನೆಯವರೆಲ್ಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ತಿಳಿಸುವುದಾಗಿತ್ತು. ಕೆಲವೊಂದು ಶಾಸ್ತ್ರ ಸಂಪ್ರದಾಯಗಳನ್ನು ಈಗಿನ ಕಾಲಕ್ಕೆ ತಕ್ಕಂತೆ ಪಾಲಿಸಲು ಸಾಧ್ಯವಿಲ್ಲವೆಂದರೂ ಅವುಗಳ ಬಗ್ಗೆ ತಿಳುವಳಿಕೆ ಇಟ್ಟುಕೊಳ್ಳುವುದು ಉತ್ತಮ.

ದೇವರ ಪಾತ್ರೆ ಮುಸುರೆ ಪಾತ್ರೆ ಎಂಜಲು ತಟ್ಟೆ ಎಂಜಲು ಲೋಟ ಪ್ರತ್ಯೇಕವಾಗಿಡಬೇಕು. ಹಬ್ಬ ಹರಿದಿನ ಶುಕ್ರವಾರ ವಿಶೇಷ ದಿನಗಳಲ್ಲಿ ಹಾಗಲಕಾಯಿ, ಬಾಳೆ ಗಿಡದ ಕಾಯಿದಿಂಡು ಮಾಡುವಂತಿಲ್ಲ. ಬೂದುಗುಂಬಳಕಾಯಿ ಚೀನಿಕಾಯಿ ಇಡಿಕಾಯಿಗಳನ್ನು ಹೆಣ್ಣು ಮಕ್ಕಳು ಒಡೆಯುವಂತಿಲ್ಲ. ಗಂಡಸರು ಮನೆ ಹೊರಗೆ ಒಡೆದು ಕೊಟ್ಟ ಮೇಲೆ ಹೆಚ್ಚಬೇಕು.

ಒಡೆದ ಬಳೆಗಳನ್ನು ಕೈಗೆ ಹಾಕಿಕೊಳ್ಳಲೇಬಾರದು. ಹೋಗಿ ಬರುತ್ತೇವೆ ಎಂದು ಹೇಳುವವರ ಎದುರಿಗೆ ಮುಖಕ್ಕೆ ಎಣ್ಣೆ ಹಚ್ಚಿಕೊಂಡಿರುವುದು ಅಥವಾ ಮುಖ ತೊಳೆಯದೆ ಹಣೆಗೂ ಇಡದೆ ಹೊರಡುವವರ ಎದುರಿಗೆ ಬರಬಾರದು. ಹೊರಟ ಕೂಡಲೇ ಮುಖ ತೊಳೆದುಕೊಳ್ಳಲು ಹೋಗುವುದು ಸ್ನಾನಕ್ಕೆ ಹೋಗುವುದು ಮಾಡಬಾರದು. ಊಟ ಮಾಡಿ ಹೊರಟವರು ಊಟ ಮಾಡುವವರಿಗೆ ನಾವು ಹೊರಡುತ್ತೇವೆ ಎಂದು ಹೇಳದೆ ಅವರ ಊಟ ಮುಗಿಯುವವರೆಗೂ ಅಲ್ಲಿಯೇ ಇರಬೇಕು.

ಶುಭ ಸಮಾರಂಭಗಳಿಗೆ ಊಟಕ್ಕೆ ಹೋದಾಗ ಹಿಂದಿರುಗಿ ಬರುವಾಗ ಮನೆಯವರಿಗೆ ಹೋಗಿ ಬರುತ್ತೇವೆ ಚೆನ್ನಾಗಿತ್ತು ಎಂದು ಹೇಳಬೇಕು ಹಾಗೆಯೇ ದುಃಖದ ಕಾರ್ಯಕ್ರಮಗಳಿಗೆ ಹೋದಾಗ ಹೋಗಿ ಬರುತ್ತೇವೆ ಎಂದು ಹೇಳುವಂತಿಲ್ಲ ಹಾಗೂ ದುಃಖದ ಮನೆಗೆ ಬಂದವರು ಹೊರಡುತ್ತೇವೆ ಎಂದು ಹೊರಟು ನಿಂತವರಿಗೆ ಊಟ ಮಾಡಿ ಎಂದು ಹೇಳಬಾರದು.

ಊರಿಗೆ ಹೊರಟವರ ಬಟ್ಟೆ ಗಂಟುಟ್ರಂಕು ಇವುಗಳ ಮೇಲೆ ಕೂರಬಾರದು. ಪ್ರಯಾಣದಲ್ಲಿ ತೊಂದರೆಯಾಗುತ್ತದೆ. ಅಪಘಾತ ಕೂಡ ಆಗಬಹುದು. ಹೊರಡುವಾಗ ಹಿರಿಯರ ಕಾಲಿಗೆ ನಮಸ್ಕರಿಸಬೇಕು. ಮೂರು ಸಂಜೆ ಹೊತ್ತು ಮುಸುಕು ಹೊದ್ದು ಮಲಗಬಾರದು. ದೀಪ ಹಚ್ಚದೆ ಬಾಗಿಲು ಹಾಕಿ ಒಳಗೆ ಕೂರಬಾರದು.

ಶುಕ್ರವಾರ ಮಂಗಳವಾರ ಹಬ್ಬದ ದಿನಗಳಲ್ಲಿ ಉಗುರು ಕತ್ತರಿಸುವುದು ಹಾಗೂ ಉಗುರುಗಳನ್ನು ಮನೆ ಒಳಗೆ ಹಾಕುವುದು ಮಾಡಬಾರದು. ತಲೆ ಬಾಚಿಕೊಂಡು ಬಿದ್ದ ಕೂದಲನ್ನು ಹಾಗೆಯೇ ಬಿಡಬಾರದು ಹೊತ್ತಿಲ್ಲದ ಹೊತ್ತಿನಲ್ಲಿ ಬೀದಿ ಬಾಗಿಲಲ್ಲಿ ಕುಳಿತು ತಲೆ ಬಾಚಿಕೊಳ್ಳಬಾರದು.

ಬಟ್ಟೆಗಳನ್ನು ಮೈ ಮೇಲೆ ಧರಿಸಿದ ಮೇಲೆ ಮೈ ಮೇಲಿದ್ದಂತೆಯೇ ಕತ್ತರಿಸುವುದು ಗುಂಡಿ ಹಾಕುವುದು, ಹೊಲೆಯುವುದು ಮಾಡಬಾರದು ಇದರಿಂದ ಮನುಷ್ಯನ ಕಂಟಕ ಹೆಚ್ಚಾಗುತ್ತದೆ. ಅರ್ಧಂಬರ್ಧ ಮುಖ ತೊಳೆಯುವುದು ಕಾಲಿನ ಹಿಮ್ಮಡಿ ನೆನೆಯದಂತೆ ಮುಂದೆ ಮಾತ್ರ ಕಾಲಿಗೆ ನೀರು ಹಾಕಿಕೊಳ್ಳುವುದನ್ನು ಮಾಡಬಾರದು. ಶನಿ ಹಿಡಿಯುತ್ತದೆ ಎನ್ನುತ್ತಿದ್ದರು.

ಕಬ್ಬಿಣದ ಸಾಮಾನುಗಳನ್ನು ಕೈಯಿಂದ ಮತ್ತೊಂದು ಕೈಗೆ ಕೊಡಬಾರದು. ಯಾರೋ ಕರ್ಚೀಫ್ ಕೊಟ್ಟರೆ ತೆಗೆದುಕೊಳ್ಳಬಾರದು. ಸಂಜೆಯ ಹೊತ್ತು ಮೊಸರು ಅರಿಶಿನ ಉಪ್ಪು ಇವುಗಳನ್ನು ಹೊಸ್ತಿಲಾಚೆ ಕೊಡಬಾರದು. ಅಕಸ್ಮಾತ್ ಹೆಪ್ಪಿಗೆ ನೆರೆಹೊರೆಯವರು ಮೊಸರು ಕೇಳಿದಾಗ ಒಣಮೆಣಸಿನಕಾಯನ್ನು ಚೂರು ಹಾಕಿ ಮೊಸರನ್ನು ಕೊಡಬಹುದು.

ಕುಲ ದೇವರ ವಾರ ಅಥವಾ ಒಂದೇ ದಿನ ಮಂಗಳವಾರ ಶುಕ್ರವಾರ ತಂದೆ ಮಕ್ಕಳು ಅಣ್ಣ ತಮ್ಮ ಒಮ್ಮೊಟ್ಟಿಗೆ ಕ್ಷೌರ ಮಾಡಿಸಿಕೊಳ್ಳುವಂತಿಲ್ಲ. ಮಾಡಿದ ಅಡುಗೆಗಳಿಗೆ ಒಗ್ಗರಣೆ ಹಾಕದೆ ಗಂಡಸರಿಗೆ ಬಡಿಸಬಾರದು.ಉಪನಯನ ಆದ ಮೇಲೆ ಗಂಡು ಮಕ್ಕಳು ತಂಗಳು ಪದಾರ್ಥ ತಿನ್ನಬಾರದು.

ಊಟ ಮಾಡಲು ಕಾಯಬೇಕು. ಊಟವನ್ನು ಕಾಯಿಸಬಾರದು ಅನ್ನ ತಟ್ಟೆಯ ಮೇಲೆ ಹಾಕಿ ಎಷ್ಟು ಹೊತ್ತಾದರೂ ಬರದೇ ಇರಬಾರದು.

ಎಂಜಲು ಕೈಯನ್ನು ಒಣಗಿಸುವುದು ಎಂಜಲು ತಟ್ಟೆಯನ್ನು ಒಣಗಿಸುವುದು ಮಾಡಬಾರದು. ಇದರಿಂದ ಅಶುಭ ಮತ್ತು ಸಾಲವಾಗುತ್ತದೆ. ಎಂಜಲು ಕೈಯಲ್ಲಿ ತಟ್ಟೆಯನ್ನು ಎತ್ತಿಕೊಂಡು ಹೋಗಿ ತೊಳೆಯ ಬಾರದು ಮೊದಲು ಕೈ ತೊಳೆದುಕೊಂಡು ಬಂದು ನಂತರ ಎಂಜಲು ತಟ್ಟೆಯನ್ನು ಎತ್ತಬೇಕು.

ಊಟದ ಮಧ್ಯೆ ಏಳಬಾರದು.

ಚಪ್ಪಲಿ ಪೊರಕೆ (ಕಸಬರಿಕೆ)ಗಳನ್ನು ತಲೆಕೆಳಗಾಗಿ ಇಡಬಾರದು.

ಏಣಿಯನ್ನು ಉದ್ದಕ್ಕೆ ಮಲಗಿಸಬಾರದು.

ಸಂಜೆ ಹೊತ್ತು ಮನೆ ಗುಡಿಸಬಾರದು. ದೀಪ ಹಚ್ಚು ಮೊದಲೇ ಗುಡಿಸಿ ಹಿಂಬಾಗಿಲು ಹಾಕಿ ಮುಂಬಾಗಿಲು ತೆರೆದು ದೀಪ ಹಚ್ಚಬೇಕು.

ಮಧ್ಯಾಹ್ನ 12 ಗಂಟೆಯ ನಂತರ ತುಳಸಿ ಗಿಡದ ಎಲೆ ಕೀಳಬಾರದು. ತುಳಸಿ ಸಸ್ಯವನ್ನು ಕೊಡುವುದಾದರೂ ಬೆಳಗಿನ ಸಮಯದಲ್ಲಿ ಕೊಡಬೇಕು.

ಅಪರಾಹ್ನದ ಹೊತ್ತಿನಲ್ಲಿ ಹೊಳೆ ಬದಿ ಮರದ ಕೆಳಗೆ ಹೋಗಬಾರದು. ಮನೆ ಮುಂದಿನ ಬಾಗಿಲ ಚಿಲಕವನ್ನು ಶಬ್ಧ ಮಾಡಬಾರದು ಜಗಳವಾಗುತ್ತದೆ.

ಶುಭ ವಿಚಾರಗಳನ್ನು ಮಾತಾಡುವ ಸಂದರ್ಭದಲ್ಲಿ ಒಂಟಿ ಸೀನು ಸೀನಬಾರದು. ಅಕಸ್ಮಾತ್ ಬಂದರೆ ಸೂಕ್ಷ ಅರಿತು ಬೇಗ ಎದ್ದು ಹೋಗಬೇಕು.

ಬಿಸಿ ಬಿಸಿ ಅನ್ನಕ್ಕೆ ಹಾಲು ಅಥವಾ ಮೊಸರು ಹಾಕಿ ತಿನ್ನಬಾರದು.

ಸೋಮವಾರ ಎಣ್ಣೆ ಹಚ್ಚಿ ತಲೆಗೆ ನೀರು ಹಾಕಿಕೊಳ್ಳಬಾರದು.

ಒಂಟಿಕಾಲಲ್ಲಿ ನಿಂತು ಮಾತಾಡಬಾರದು.

ಹೊಸ್ತಿಲ ಮೇಲೆ ಕೂರಬಾರದು.

ಮಲಗಿದಾಗ ಗೋಡೆಗೆ ಕಾಲಿನಿಂದ ಒದೆಯುತ್ತಾ ಗೋಡೆ ಮೇಲೆ ಕಾಲು ಹಾಕಿ ಮಲಗಬಾರದು.

ಕಾಲ ಕೆಳಗೆ ತೊಟ್ಟಿಲು ಕಟ್ಟಿದ್ದರೆ ಕಾಲಿನಿಂದ ತೊಟ್ಟಿಲು ಒದೆಯಬಾರದು. ಆದರೇ ಕೆಲವೊಬ್ಬರು ನಿದ್ರೆಗಣ್ಣಿನಲ್ಲಿ ಕಾಲಿನಿಂದಲೇ ತೂಗುತ್ತಾರೆ.

ಒದ್ದೆ ಬಟ್ಟೆಯನ್ನು ಮೈ ಮೇಲೆ ಧರಿಸಬಾರದು. ಸಂಜೆಯ ವೇಳೆ ಬಟ್ಟೆ ಒಗೆಯಬಾರದು.

ರಾತ್ರಿ ಮುಸುರೆ ಪಾತ್ರೆಗಳಿಗೆ ನೀರು ಹಾಕಿಡದೆ ಬಿಡಬಾರದು, ಹರಡಬಾರದು ಎಲ್ಲಾ ತೊಳೆದಿಟ್ಟು ಮಲಗುವುದಾದರೆ ಒಂದು ಚೂರು ಅನ್ನ ಅಥವಾ ಅವಲಕ್ಕಿ ಬಟ್ಟಲಲ್ಲಿ ಹಾಕಿ ಮುಚ್ಚಿಡಬೇಕು. ಅಕಸ್ಮಾತ್ ಅನ್ನ ಉಳಿಯದಿದ್ದರೆ ಚೂರು ಅವಲಕ್ಕಿ ಬೆಲ್ಲ ಏನೋ ಒಂದು ಚೂರು ಪದಾರ್ಥಗಳನ್ನು ಹಾಕಿ ಮುಚ್ಚಿಡಬೇಕು. ಮನೆಯಲ್ಲಿ ರಾತ್ರಿ ಸಮಯದಲ್ಲಿ ಊಟ ಮಾಡದೇ ಹಾಗೆ ಇರಬಾರದು ಒಂದು ಹಣ್ಣನಾದರು ತಿನ್ನಬೇಕು.

ಅಪರೂಪಕ್ಕೆ ನೆಂಟರ ಮನೆಗೆ ಬಾಣಂತಿ ಮನೆಗೆ ಮಗು ನೋಡಲು ಅಥವಾ ವಯಸ್ಸಾದವರನ್ನು ನೋಡಲು ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಮತ್ತು ಹಾಗೆ ನೋಡಲು ಬಂದವರನ್ನು ಬರಿಗೈಯಲ್ಲಿ ಕಳಿಸಬಾರದು. ಕಾಫಿ, ಟೀ ಆಗದಿದ್ದರೂ ಚಮಚ ಸಕ್ಕರೆ ಕುಡಿಯಲು ನೀರನ್ನಾದರೂ ಕೊಟ್ಟು ಕಳುಹಿಸಬೇಕು.

Leave a Comment