ದೀಪದ ಬತ್ತಿ

ದೇವರ ಮುಂದೆ ಹಚ್ಚುವ ದೀಪದ ಬತ್ತಿಯ ಬಗ್ಗೆ ತಿಳಿಯೋಣ. ದೇವರಿಗೆ ದೀಪ ಹಚ್ಚುವಾಗ ತುಂಬಾ ಪವಿತ್ರತೆ ಇರಬೇಕು ಇದರಿಂದ ಮನೆಗೆ ಮತ್ತು ಮನೆಯಲ್ಲಿರುವವರಿಗೆ ಒಳ್ಳೆಯದು.

ದೀಪದ ಬತ್ತಿಯು ಕೊಳೆಯಿಂದ ಕೂಡಿದ್ದರೆ ಮನೆಯಲ್ಲಿ ಇರುವವರಿಗೆ ಜ್ಞಾಪಕಶಕ್ತಿ ಕಡಿಮೆಯಾಗುವುದು ಮತ್ತು ತುಂಬಾ ಯೋಚನೆ ಮಾಡಿ ಆರೋಗ್ಯ ಕೆಡಿಸಿಕೊಳ್ಳುವರು. ದೀಪದ ಬತ್ತಿಯು ಕಪ್ಪಾಗಿದ್ದರೇ ಜೀವನದಲ್ಲಿ ಬಹಳ ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ದೀಪದ ಬತ್ತಿಯು ಶುಭ್ರವಾಗಿ ಬೆಳ್ಳಗೆ ಇದ್ದರೇ ಜೀವನದಲ್ಲಿ ಅಂದುಕೊಂಡ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ದೀಪದ ಬತ್ತಿಯು ತುಂಬಾ ಚಿಕ್ಕದಾಗಿದ್ದರೆ ದಾರಿದ್ರ್ಯತನ ಬರುತ್ತದೆ. ಮನೆಯಲ್ಲಿ ಕೋಪ ಉದ್ವೇಗ ಜಗಳಗಳು ಜಾಸ್ತಿಯಾಗುತ್ತವೆ.

ಕೃತಕ ಬಣ್ಣಗಳಿಂದ ಕೂಡಿದ ದೀಪದ ಬತ್ತಿಗಳನ್ನು ಹಚ್ಚಬೇಡಿ ಇದರಿಂದ ಋಣಾತ್ಮಕ ಶಕ್ತಿಯು ಹೆಚ್ಚಾಗಿ ಚರ್ಮ ರೋಗಗಳು ಬರುತ್ತವೆ. ದೀಪದ ಬತ್ತಿಯು ಬಹಳ ಗಟ್ಟಿಯಾಗಿದ್ದರೇ ಸಂಸಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಬಾಳುತ್ತಾರೆ.

ಒಂಟಿ ಬತ್ತಿಯನ್ನು ಹಚ್ಚಬಾರದು ಎರಡು ಅಥವಾ ಅದಕ್ಕಿಂತ ಹೆಚ್ಚು ಬತ್ತಿಗಳನ್ನು ಹಚ್ಚಿದರೆ ದೇವರ ಗುರುಗಳ ಅನುಗ್ರಹ ದೊರೆಯುವುದಲ್ಲದೇ ಬಂಧು ಮಿತ್ರರ ಸಹಕಾರ ದೊರೆಯುವುದು.

ಒಂದು ದೀಪಕ್ಕೆ ಎರಡು ಬತ್ತಿಗಳನ್ನು ಜೋಡಿಸಿ ಹಚ್ಚಬೇಕು. ಹೀಗೆ ದೇವರ ಎಡಬಲಗಳಲ್ಲಿ ಎರಡು ದೀಪಗಳನ್ನು ಹಚ್ಚಿದರೆ ಮನೆಯಲ್ಲಿ ಹೆಚ್ಚು ಸುಖ ಸಂತೋಷ ತುಂಬುತ್ತದೆ.

ಜೋಡಿ ದೀಪಗಳನ್ನು ಹಚ್ಚುವುದರಿಂದ ಮನೆಯಲ್ಲಿ ಎಲ್ಲರೂ ಆರೋಗ್ಯವಾಗಿರುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಲಾಭವಾಗುತ್ತದೆ. ಮಕ್ಕಳು ವಿದ್ಯಾವಂತರಾಗುತ್ತಾರೆ. ಆರು ಬತ್ತಿಗಳನ್ನು ಸೇರಿಸಿ ದೀಪ ಹಚ್ಚಿದರೆ ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಸಾಲದ ಸಮಸ್ಯೆ ನಿವಾರಣೆ ಆಗುತ್ತದೆ.

ಎಂಟು ಬತ್ತಿ (4+4) ಗಳನ್ನು ಹಚ್ಚಿದರೆ ಮನೆಯಲ್ಲಿ ರೋಗ ಬಾಧೆ ನಿವಾರಣೆಯಾಗಿ ಎಲ್ಲರೂ ಆರೋಗ್ಯವಂತರಾಗುತ್ತಾರೆ. ಅಪಮೃತ್ಯು ಮತ್ತು ಅಪಘಾತಗಳ ಭಯ ದೂರವಾಗುತ್ತದೆ.

ಹತ್ತು ಬತ್ತಿಗಳನ್ನು (5+5) ಹಚ್ಚಿದರೆ ಮನೆಯಲ್ಲಿ ದೇವರ ಗುರುಗಳ ಅನುಗ್ರಹ ಆಶೀರ್ವಾದ ದೊರಕುವುದು ಮತ್ತು ಸಕಲ ಕಾರ್ಯಗಳು ಸರಾಗವಾಗಿ ನಡೆಯುತ್ತವೆ. ಜಾತಕದ ದೋಷಗಳು ನಿವಾರಣೆಯಾಗುತ್ತವೆ. ಮಕ್ಕಳು ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಾರೆ. ದೇವರ ದೀಪದ ಬತ್ತಿಗಳನ್ನು ಎರಡು ದಿವಸಕ್ಕೊಮ್ಮೆ ಬದಲಾಯಿಸುತ್ತಾ ಇರಬೇಕು.

Leave a Comment