ಲಕ್ಷ್ಮೀ ನಿವಾಸ

ನಾವು ಈ ಲೇಖನದಲ್ಲಿ ಮನೆಯಲ್ಲಿ ಲಕ್ಷ್ಮಿ ವಾಸವಾಗಿ ಇರಬೇಕು ಎಂದರೆ, ಯಾವ ರೀತಿಯಾಗಿ ನಾವು ಮನೆಯನ್ನು ನೋಡಿಕೊಳ್ಳಬೇಕು ಎಂದು ಈ ಕೆಳಗೆ ತಿಳಿಸಲಾಗಿದೆ.

ಸದಾ ಲಕ್ಷ್ಮಿ ನೆಲೆಯಾಗಿ ಇರಲು ಯಾವಾಗಲೂ ಮನೆಯನ್ನು ಸ್ವಚ್ಛವಾಗಿ ಇಡಬೇಕು . ಮನೆಯ ಸುತ್ತಲೂ ಹಾಕಿರುವ ಕಾಂಪೌಂಡಿನ ಒಳಗಡೆ ಯಾವುದೇ ರೀತಿಯ ಬೇಡವಾದ ಕಸ , ಕಡ್ಡಿಗಳನ್ನು ಇಡಬಾರದು . ಸ್ವಚ್ಛತೆ ಬಹಳ ಮುಖ್ಯ. ಹಾಗಿದ್ದಲ್ಲಿ ಮಾತ್ರ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆಸುತ್ತಾಳೆ. ಮಕ್ಕಳ ಬಟ್ಟೆಯನ್ನು ಮಸಿ ಬಟ್ಟೆಯಾಗಿ ಬಳಸಬೇಡಿ . ಅಡುಗೆ ಮಾಡುವಾಗ ಮಕ್ಕಳ ಬಟ್ಟೆ ಸುಟ್ಟರೆ ಅದು ದಾರಿದ್ರ್ಯ.

ಹಬ್ಬ ಹರಿದಿನಗಳಲ್ಲಿ ಮನೆಯನ್ನು ಸ್ವಚ್ಛ ಮಾಡುವುದು ಬೇರೆ. ಆದರೆ ದಿನನಿತ್ಯ ಮನೆಯನ್ನು ಸ್ವಚ್ಛ ಮಾಡುವಾಗ, ಯಾವಾಗಲೋ ಒಮ್ಮೆ ಸ್ವಚ್ಛ ಮಾಡುವುದರ ಬದಲು, ಪ್ರತಿನಿತ್ಯ ಆದಾಗ ಸ್ವಲ್ಪ ಸ್ವಲ್ಪವೇ ಸ್ವಚ್ಛ ಮಾಡುವುದರಿಂದ ಸುಲಭವಾಗುತ್ತದೆ.

ಮನೆಯ ಗೇಟು ಮತ್ತು ಮುಖ್ಯದ್ವಾರದ ಬಾಗಿಲು ಯಾವುದೇ ರೀತಿಯ ಕೆಟ್ಟ ಶಬ್ಧ ಬರದ ಹಾಗೆ ಎಚ್ಚರಿಕೆ ವಹಿಸಿ. ಮನೆಯ ಒಳಗಡೆ ಬರುವಾಗ ಬಾಗಿಲಲ್ಲಿ ಪಾದರಕ್ಷೆಗಳು ಕಾಣದಂತೆ ಇಡಬೇಕು.

ಮನೆಯ ಹೊಸ್ತಿಲಿಗೆ ಯಾವಾಗಲೂ ರಂಗೋಲಿಯನ್ನು ಹಾಕಿ. ಅರಿಶಿಣ ಕುಂಕುಮ ಮತ್ತು ಹೂವನ್ನು ಇಡಬೇಕು. ತಳಿರು ತೋರಣದಿಂದ ಅಲಂಕೃತವಾದ ಮನೆಯನ್ನು ಲಕ್ಷ್ಮೀದೇವಿ ತುಂಬಾ ಇಷ್ಟ ಪಡುತ್ತಾಳೆ.

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನು ಇಡುವ ಪದ್ಧತಿ ಇದೆ ,ತುಳಸಿ ಕಟ್ಟೆಯ ಮುಂದೆ ಪ್ರತಿನಿತ್ಯ ರಂಗೋಲಿಯನ್ನು ಹಾಕಬೇಕು. ದಿನನಿತ್ಯ ದೇವರಿಗೆ ಪೂಜೆ ಮಾಡುವ ಸಮಯದಲ್ಲಿ ತುಳಸಿ ಕಟ್ಟೆಗೂ ಪೂಜೆ ಮಾಡುವುದು ತುಂಬಾ ಉತ್ತಮ. ಬೆಳಿಗ್ಗೆ ಸಾಧ್ಯವಿಲ್ಲ ಎಂದಾದರೆ ಸಂಜೆಯ ಸಮಯದಲ್ಲಾದರೂ ದೀಪ ಹಚ್ಚುವುದು .ಇವೆಲ್ಲವೂ ಕೂಡಾ ತುಂಬಾ ವಿಶೇಷವಾಗಿ ತಪ್ಪದೇ ಮಾಡುವಂತಹ ಪ್ರತಿನಿತ್ಯದ ಕೆಲಸಗಳಲ್ಲಿ ಇದು ಒಂದು .

ವಾಸ್ತು ಬಾಗಿಲಿಗೆ ವಿಶೇಷವಾಗಿ ಮೇಲ್ಭಾಗದಲ್ಲಿ ಅರಿಶಿಣ ಕುಂಕುಮ ಹಚ್ಚಿ. ಗೆಜ್ಜೆ ವಸ್ತ್ರವನ್ನು ಇಡಬೇಕು.ವಾಸ್ತು ಬಾಗಿಲಿನ ಅಕ್ಕ ಪಕ್ಕವೂ ಕೂಡ ಅರಿಶಿನ ಕುಂಕುಮವನ್ನು ಹಚ್ಚಿ ,ಹೂವು ಇಡಬೇಕು. ಮನೆಯ ವರಾಂಡದಲ್ಲಿ ಕಸ, ಕಡ್ಡಿಗಳು ,ಇರಬಾರದು , ಪ್ರತಿನಿತ್ಯ ಗುಡಿಸಬೇಕು. ಮನೆಯಲ್ಲಿ ಎಲ್ಲೂ ಜೇಡರ ಬಲೆ ಕಟ್ಟಿರಬಾರದು.

ಇನ್ನು ದೇವರ ಮನೆಯ ಬಗ್ಗೆ ಹೇಳಬೇಕೆಂದರೆ , ದೇವರ ಮನೆ ಯಾವಾಗಲೂ ಶುದ್ಧವಾಗಿ ಸ್ವಚ್ಛವಾಗಿ ಇರಬೇಕು . ಯಾವಾಗಲೂ ನೀರು ತುಂಬಿದ ಪಾತ್ರೆ ದೇವರ ಮುಂದೆ ಇರಲೇಬೇಕು. ದೇವರ ಮನೆಯಲ್ಲಿ ಶಂಖು, ಗಂಟೆ ಇರಬೇಕು.

ದೀಪ ಯಾವಾಗಲೂ ಉರಿಯುತ್ತಲೇ ಇರಬೇಕು. ಎಡಭಾಗದಲ್ಲಿ ತೈಲ ದೀಪ ಅಥವಾ ಎಣ್ಣೆಯ ದೀಪ ಇರಬೇಕು. ಬಲಭಾಗದಲ್ಲಿ ತುಪ್ಪದ ದೀಪವನ್ನು ಇಡಬೇಕು. ತುಪ್ಪದ ದೀಪವನ್ನು ಎಲ್ಲರಿಗೂ ಎಲ್ಲಾ ಕಾಲದಲ್ಲೂ ಉರಿಸಲು ಸಾಧ್ಯವಿಲ್ಲ, ಹಾಗಾಗಿ ಎಣ್ಣೆ ದೀಪಾವನ್ನಾದರೂ ಹಚ್ಚಬೇಕು.

ಮಲಗುವ ಕೋಣೆಯಲ್ಲಿ ಉಪಯೋಗಿಸುವ ಹಾಸಿಗೆ ಇವೆಲ್ಲವನ್ನೂ ಪ್ರತಿನಿತ್ಯ ಎತ್ತಿಡಬೇಕು, ಒಂದು ವೇಳೆ ಮಲಗಲು ಮಂಚವನ್ನು ಉಪಯೋಗಿಸುತ್ತಿದ್ದರೆ, ಮಂಚದ ಮೇಲ್ಭಾಗದಲ್ಲಿ ಒಂದು ಹೊದಿಕೆಯನ್ನು ಸುಕ್ಕಾಗದಂತೆ ಹಾಕಬೇಕು. ಗೋಡೆಗೆ ಜಾಸ್ತಿ ಮೊಳೆಯನ್ನು ಹೊಡೆದು ಫೋಟೋಗಳನ್ನು ಹಾಕುವುದು ಅಷ್ಟು ಶೋಭೆಯಲ್ಲ.

ಮನೆಯಲ್ಲಿ ಯಾವಾಗಲೂ ಹರಿದ ಬಟ್ಟೆ ಸುಟ್ಟಿರುವ ಬಟ್ಟೆಗಳನ್ನು ಇಟ್ಟುಕೊಳ್ಳಬಾರದು .ಇವುಗಳ ಜೊತೆಯಲ್ಲಿ ಪಾದರಕ್ಷೆಗಳನ್ನು ಒಂದು ಮೂಲೆಯಲ್ಲಿ ಇಡುವ ಪದ್ಧತಿಯನ್ನು
ರೂಢಿಯಲ್ಲಿ ಇಟ್ಟುಕೊಳ್ಳಬೇಕು. ಹಾಗೆಯೇ ಪ್ರತಿನಿತ್ಯ ಅದೇ ಜಾಗದಲ್ಲಿ ಜೋಡಿಯಾಗಿ ಪಾದರಕ್ಷೆಗಳನ್ನು ಇಡುವುದು ಉತ್ತಮ.

ಕಸವನ್ನು ಗುಡಿಸುವ ಪೊರಕೆಯನ್ನು ಎಲ್ಲೆಂದರಲ್ಲಿ ಇಡಬಾರದು. ಪೊರಕೆಗೂ ಕೂಡಾ ನಿರ್ಧಿಷ್ಟವಾದ ಸ್ಥಳವನ್ನು ರೂಡಿಯಲ್ಲಿಟ್ಟು ಪ್ರತಿನಿತ್ಯ ಆ ಜಾಗದಲ್ಲಿ ಇಡುವುದು ಉತ್ತಮ.

ಎಲ್ಲಾ ದೇವರ ಫೋಟೋ ಅಥವಾ ವಿಗ್ರಹವನ್ನು ಇಡುವುದು ಉತ್ತಮವಲ್ಲ, ಎಲ್ಲಾ ದೇವರಿಗೂ ಅದರದ್ದೇ ಆದ ಪೂಜೆ ಪುನಸ್ಕಾರಗಳಿವೆ. ನೈವೇದ್ಯಗಳಿವೆ, ಆದ್ದರಿಂದ ಮನೆ ದೇವರ ಫೋಟೋ, ಕುಟುಂಬ, ಮನೆಯವರ ರಕ್ಷಣೆಗಾಗಿ ಆಂಜನೇಯ ಫೋಟೋ, ಅಥವಾ ಲಕ್ಷ್ಮೀ ವೆಂಕಟೇಶ್ವರ ಫೋಟೋ , ಇತ್ಯಾದಿ ಫೋಟೋಗಳನ್ನು ಹಾಕಿ. ಮನೆಯ ತುಂಬಾ ದೇವರ ಎಲ್ಲಾ ಫೋಟೋ ವಿಗ್ರಹಗಳನ್ನು ಇಡುವುದು ಒಳ್ಳೆಯದಲ್ಲ.

ಗತಿಸಿ ಹೋದವರ ಫೋಟೋವನ್ನು ಪಶ್ಚಿಮ ದಿಕ್ಕಿನಲ್ಲಿ ಹಾಕಿ, ಪೂರ್ವ ದಿಕ್ಕಿನಲ್ಲಿ ನೋಡುವುದರಿಂದ , ಪಿತೃ ದೇವತೆಗಳಿಗೆ ಸಾಕಷ್ಟು ನೆಮ್ಮದಿ ಇರುತ್ತದೆ , ಪಿತೃ ದೇವತೆಗಳು ಕೂಡಾ ಮನೆಯವರ ಕುಟುಂಬದ ಬಗ್ಗೆ ಸಂತೃಪ್ತಿ ಆಗುತ್ತಾರೆ. ಇದರಿಂದ ಪಿತೃ ದೋಷವು ಬರುವುದಿಲ್ಲ. ಪಿತೃ ದೋಷ ಇಲ್ಲದ ಮನೆಯಲ್ಲಿ ಲಕ್ಷ್ಮೀ ದೇವಿ ಯಾವಾಗಲೂ ನೆಲೆಸುತ್ತಾಳೆ ಎಂದು ಹೇಳುತ್ತಾರೆ.

ನಾವು ಮಾಡುವ ಸಣ್ಣ ಪುಟ್ಟ ಕೆಲಸಗಳು ಕೂಡಾ ತೊಂದರೆಯಾಗುವಂತೆ ಮಾಡುತ್ತದೆ . ಅಂದರೆ ನಾವು ಅಡುಗೆ ಮಾಡುವಾಗ ಒಲೆಯ ಮೇಲೆ ಏನಾದರೂ ಕುದಿಸಲು ಇಟ್ಟಾಗ ಅದು ಉಕ್ಕಿ ಚೆಲ್ಲಿದರು ಕೂಡ ಅನಿಷ್ಟ ಎಂದು ಹೇಳುತ್ತಾರೆ . ಹಾಗಾಗಿ ಸಾಧ್ಯವಾದಷ್ಟು ಈ ರೀತಿ ಆಗದಂತೆ ನೋಡಿಕೊಳ್ಳಬೇಕು . ಅಡುಗೆ ಮನೆಯಲ್ಲಿರುವ ಪಾತ್ರೆಗಳು ಶುದ್ಧವಾಗಿರಬೇಕು.

ಮನೆಯಲ್ಲಿ ತಿಜೋರಿ ಅಥವಾ ದುಡ್ಡು ಇಡುವ ಜಾಗವು ಸ್ವಲ್ಪ ಕತ್ತಲೆಯಲ್ಲಿ ಇರಬೇಕು. ಬೆಳಕಿನಲ್ಲಿ ಇಡಬಾರದು. ಎಂದು ಹೇಳುತ್ತಾರೆ. ನಾವು ದುಡ್ಡು ತೆಗೆಯುವಾಗ ಇಡುವಾಗ ನಾಲ್ಕು ಜನರ ಕಣ್ಣಿಗೆ ಕಾಣಬಾರದು. ಲಕ್ಷ್ಮೀದೇವಿ ನಿಲ್ಲುವಂತ ಸ್ಥಳವೇ ಕುಬೇರ ಮೂಲೆ ಆದ್ದರಿಂದ ಕುಬೇರ ಮೂಲೆಯಲ್ಲಿ ಬೀರು ಅಥವಾ ಹಣವನ್ನು ಇಡುವುದು ಉತ್ತಮ. ಆಗ ಕುಬೇರ ಲಕ್ಷ್ಮಿ ಅಥವಾ ಲಕ್ಷ್ಮೀ ಅನುಗ್ರಹ ಸಿಗಲು ಸಾದ್ಯ.

ಎಲ್ಲಾ ದೇವರುಗಳ ಅನುಗ್ರಹ ಪಡೆಯಲು ಮೊದಲು ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಬೇಕು .ಲಕ್ಷ್ಮಿ ದೇವಿಯ ಅನುಗ್ರಹದಿಂದ ಸಮಾಜದಲ್ಲಿ ಒಂದು ಉತ್ತಮ ವ್ಯಕ್ತಿಯಾಗಿ ಮನೆಯಲ್ಲಿ ಧನ, ಸಂಪತ್ತು ,ಸುಖ ಶಾಂತಿ, ನೆಮ್ಮದಿ, ವೃದ್ಧಿಯಾಗುತ್ತದೆ .

Leave a Comment